ಬಿ.ಎಲ್.ರೈಸ್ :--
(೧೮೩೭-೧೯೨೭). ಎಪಿಗ್ರಾಫಿಯ ಕರ್ನಾಟಿಕ ಸಂಪುಟಗಳನ್ನು ಸಿದ್ಧಪಡಿಸಿ ಕನ್ನಡ ಅಭಿವೃದ್ಧಿಗಾಗಿ ದುಡಿದ ಪ್ರಖ್ಯಾತ ವಿದ್ವಾಂಸರು. ಬೆಂಜಮಿನ್ ಲೂಯಿ ರೈಸ್ ಇವರ ಪೂರ್ಣ ಹೆಸರು. 1837 ಜುಲೈ 17ರಂದು ಭಾರತದಲ್ಲಿ ಜನಿಸಿದ ಇವರು ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿ, 1860ರಲ್ಲಿ ಭಾರತಕ್ಕೆ ಬಂದು ಬೆಂಗಳೂರಿನ ಸೆಂಟ್ರಲ್ ಹೈಸ್ಕೂಲಿನಲ್ಲಿ 5 ವರ್ಷ ಮುಖ್ಯೋಪಾಧ್ಯಾಯರಾಗಿದ್ದು ಅನಂತರ ಮೈಸೂರು ಮತ್ತು ಕೊಡಗು ಶಾಲಾ ಇನ್ಸ್‍ಪೆಕ್ಟರ್ ಆದರು.  1868ರಲ್ಲಿ ವಿದ್ಯಾಭ್ಯಾಸದ ಇಲಾಖೆಯ ಮುಖ್ಯಾಧಿಕಾರಿಗಳಾಗಿಯೂ 1883ರಲ್ಲಿ ಮೈಸೂರು ಸರ್ಕಾರದ ವಿದ್ಯಾಶಾಖೆಯ ಪ್ರಥಮ ಕಾರ್ಯದರ್ಶಿಯಾಗಿಯೂ ನೇಮಕಗೊಂಡರು.

ಕನ್ನಡದಲ್ಲಿ ಪಾಂಡಿತ್ಯವನ್ನು ಪಡೆದುಕೊಂಡಿದ್ದ ಇವರು ವಿದ್ಯಾಭ್ಯಾಸ ಇಲಾಖೆಯಲ್ಲಿದ್ದು ಸಂಸ್ಥಾನದಲ್ಲೆಲ್ಲ ಸಂಚರಿಸುತ್ತಿದ್ದಾಗ ಸ್ಥಳಪುರಾಣಗಳು, ಚಾರಿತ್ರಿಕ ವಿಷಯಗಳು, ಪುರಾತನ ಗ್ರಂಥಗಳು ಮೊದಲಾದುವನ್ನು ಸಂಗ್ರಹಿಸುತ್ತ, ಅಲ್ಲಲ್ಲಿ ದೊರೆಯುತ್ತಿದ್ದ ಶಾಸನಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಶಾಸನ ವಿಷಯಗಳನ್ನು ಆಗಾಗ ಪ್ರಕಟಿಸುತ್ತಿದ್ದರು.  ಈ ನಾಡಿನ ಸಂಚಾರದಿಂದ ಉಂಟಾದ ಅಪಾರ ಅನುಭವದ ಫಲವಾಗಿ ಮೈಸೂರು ಗೆಜಿಟಿಯರಿನ ಎರಡು ಸಂಪುಟಗಳನ್ನು 1877-78ರಲ್ಲಿ ಪ್ರಕಟಿಸಿದರು.  1881ರಲ್ಲಿ ಮೈಸೂರು ಪ್ರದೇಶದಲ್ಲಿ ನಡೆದ ಮೊದಲನೆಯ ಖಾನೇಷುಮಾರಿಯ ಲೆಕ್ಕದ ವರದಿ ಮಾಡಿದರು.

  
ಮೈಸೂರು ಸರ್ಕಾರ 1884ರಲ್ಲಿ ಪ್ರಾಚ್ಯವಸ್ತು ಶಾಖೆಯನ್ನಾರಂಭಿಸಿದಾಗ ಇವರು ತಮ್ಮ ಹುದ್ದೆಯ ಜೊತೆಗೆ ಈ ಶಾಖೆಯ ಅಧಿಕಾರವನ್ನೂ ವಹಿಸಿ ಕೊಂಡರು. ವಿದ್ಯಾಶಾಖೆಯ ಕಾರ್ಯದರ್ಶಿಯಾಗಿದ್ದಾಗಲೇ ಕೊಡಗಿನ ಶಾಸನಗಳನ್ನು ಸಂಗ್ರಹಿಸಿ ಒಂದು ಸಂಪುಟ ವನ್ನಾಗಿ ಇವರು ಪ್ರಕಟಿಸಿದುದು (1886) ಎಪಿಗ್ರಾಫಿಯ ಕರ್ನಾಟಿಕ ಮಾಲೆಗೆ ನಾಂದಿ ಯಾಯಿತು. ಅಪಾರವಾದ ಶಾಸನ ಸಂಪತ್ತಿನ ಪ್ರಾಮುಖ್ಯವನ್ನು ಅರಿತ ಆಗಿನ ಸರ್ಕಾರ ಇವರನ್ನು ಪುರಾತತ್ತ್ವಶಾಖೆಯ ಪೂರ್ಣಕಾಲದ ಅಧಿಕಾರಿಯನ್ನಾಗಿ 1890ರಲ್ಲಿ ನೇಮಿಸಿತು.  ಮುಂದೆ ಹದಿನಾರು ವರ್ಷಗಳ ಕಾಲ ಪ್ರತಿ ಜಿಲ್ಲೆಯ ಹಳ್ಳಿ ಹಳ್ಳಿಗಳನ್ನೂ ಸುತ್ತಿ ಶಾಸನಗಳನ್ನು ಸಂಗ್ರಹಿಸಿ ಹನ್ನೆರಡು ಸಂಪುಟಗಳಲ್ಲಿ ಪ್ರಕಟಿಸಿದರು. ಇವರು ಪ್ರಕಟಿಸಿದ ಶಾಸನಗಳ ಒಟ್ಟು ಸಂಖ್ಯೆ 8,869. ಈ ಶಾಸನಗಳಿಂದ ತಿಳಿದುಬರುವ ರಾಜಕೀಯ ಇತಿಹಾಸ ವನ್ನು ಸಂಗ್ರಹವಾಗಿ ತಿಳಿಸುವ "ಮೈಸೂರ್ ಅಂಡ್ ಕೂರ್ಗ್ ಫ್ರಮ್ ಇನ್‍ಸ್ಕ್ರಿಪ್ಷನ್ಸ್ "ಎಂಬ ಗ್ರಂಥವನ್ನು ಇವರು ಹೊರತಂದರು. ಇವರು ಸಂಚಾರ ಮಾಡುತ್ತಿದ್ದಾಗ ಸಂಗ್ರಹಿಸಿದ ಸಹಸ್ರಾರು ಓಲೆಗರಿ ಗ್ರಂಥಗಳಿಗಾಗಿ "ಓರಿಯಂಟಲ್ ಲೈಬ್ರರಿ "ಎಂಬ ಪ್ರಾಚ್ಯ ಗ್ರಂಥಭಂಡಾರವೊಂದು ಆರಂಭವಾಯಿತು. ಪಂಪಭಾರತ, ಪಂಪರಾಮಾಯಣ, ಶಬ್ದಾನುಶಾಸನ ಮುಂತಾದ ಮುಖ್ಯವಾದ ಕೆಲವು ಪ್ರಾಚೀನ ಗ್ರಂಥಗಳನ್ನು ಸಂಪಾದಿಸಿ "ಬಿಬ್ಲಿಯೋತಿಕಾ ಕರ್ನಾಟಿಕ ಗ್ರಂಥಮಾಲೆ"ಯಲ್ಲಿ ಹೊರತಂದಿರುವುದಲ್ಲದೆ ಕನ್ನಡನಾಡಿನ ಚರಿತ್ರೆಗೆ ಸಂಬಂಧಿಸಿದಂತೆ ನೂರಾರು ಲೇಖನಗಳನ್ನು ಹಲವು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.

1906ರ ವರೆಗೆ ಈ ದೇಶದ ಪುರಾತನ ಅಧ್ಯಯನ ರಂಗದಲ್ಲಿ ಅವಿಶ್ರಾಂತವಾಗಿ ದುಡಿದು ತಮ್ಮ 70ನೆಯ ವಯಸ್ಸಿನಲ್ಲಿ ನಿವೃತ್ತರಾಗಿ ತಾಯ್ನಾಡಿಗೆ ಮರಳಿ ಹ್ಯಾರೋ ಪಟ್ಟಣದಲ್ಲಿ ನೆಲಸಿದರು. ಅನಂತರ 1927ರ ಜುಲೈ ತಿಂಗಳಲ್ಲಿ ತಮ್ಮ 90ನೆಯ ವಯಸ್ಸಿನಲ್ಲಿ ನಿಧನರಾದರು.										
	(ಎಂ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ